ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ತಾಲ್ಲೂಕಿನ ಅರಸೀಕೆರೆ ಹೋಬಳಿ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಗಿನಜಾವದವರೆಗೂ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ, ಈ ಭಾಗದ ಬಹತೇಕ ಕೆರೆಗಳು, ಚೆಕ್ಡ್ಯಾಂಗಳು ಜಲರಾಶಿ ತುಂಬಿಕೊ೦ಡು ಮೈದುಂಬಿ ಹರಿಯುತ್ತಿವೆ.
ಅರಸೀಕೆರೆ ಹೋಬಳಿ ವ್ಯಾಪ್ತಿಯ ಉಚ್ಚಂಗಿದುರ್ಗ, ಚಟ್ನಿಹಳ್ಳಿ, ಅಣಜಿಗೆರೆ, ಮಾದಿಹಳ್ಳಿ ಹಾಗೂ ಹೋಬಳಿ ವ್ಯಾಪ್ತಿಯ ಗಡಿ ಗ್ರಾಮಗಳಿಗೆ ಹೊಂದಿಕೊ೦ಡಿರುವ ದಾವಣಗೆರೆ ಜಿಲ್ಲೆಯ ಆಲೂರು, ಅಣಿಜಿ ಹಾಗೂ ಬಿಳಿಚೋಡು ಸೇರಿದಂತೆ ವಿವಿಧೆಡೆಗಳಲ್ಲಿ ಶನಿವಾರ ಮತ್ತು ಭಾನುವಾರ ಬೆಳಗಿನಜಾವವೂ ಸಹ ನಿರಂತರವಾಗಿ ಮಳೆ ಸುರಿದಿದೆ. ಹೀಗಾಗಿ, ಈ ಭಾಗದ ಬಹುತೇಕ ಕೆರೆ- ಕಟ್ಟೆಗಳು, ಚೆಕ್ಡ್ಯಾಂಗಳು ಮೈದುಂಬಿಕೊ೦ಡಿವೆ.
ಹೋಬಳಿ ವ್ಯಾಪ್ತಿಯ ಚಟ್ನಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಯು. ಕಲ್ಲಹಳ್ಳಿ ಗ್ರಾಮದ ಕೆರೆ ಕೋಡಿಬಿದ್ದು, ಹೆಚ್ಚುವರಿ ನೀರು ಧುಮ್ಮಕ್ಕಿ ಹರಿಯುತ್ತಿದೆ. ಹೀಗಾಗಿ, ಈ ನೀರಿನ ಹಳ್ಳಗಳಿಗೆ ನಿರ್ಮಿಸಲಾದ ಚೆಕ್ಡ್ಯಾಂಗಳು ಸಹ ಮೈದುಂಬಿಕೊAಡು ಹರಿಯುತ್ತಿವೆ. ಸುಮಾರು 80ಎಕರೆ ವಿಶಾಲವಾದ ಭೂಪ್ರದೇಶ ಒಡಲಾಳ ಹೊಂದಿರುವ ಈ ಕೆರೆ ಈಗ ಸಂಪೂರ್ಣ ಜಲರಾಶಿಯನ್ನು ತುಂಬಿಕೊAಡು, ಸಮೃದ್ಧವಾಗಿದೆ. ಜತೆಗೆ, 120ಎಕರೆ ವಿಸ್ತೀರ್ಣ ಹೊಂದಿರುವ ಚಟ್ನಿಹಳ್ಳಿ ಕೆರೆಯೂ ಸಹ, ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಕೊAಡಿದೆ. ಮಳೆಯ ಪ್ರಮಾಣ ಹೀಗೆ ಮುಂದುವರೆದರೆ, ಅದು ಸಹ ಇಂದೋ, ನಾಳೆಯೋ…? ಕೋಡಿಬೀಳುವ ಸಂಭವ ಇದೆ ಎನ್ನುತ್ತಾರೆ ಗ್ರಾಮಸ್ಥರು.
ಸಕಾಲದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆಯಾಗಿರುವ ಮೆಕ್ಕೆಜೋಳ, ಹೈಬ್ರಿಡ್ಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆಗಳು ಭೂತಾಯಿ ಒಡಲಾಳದಲ್ಲಿ ನಳನಳಿಸುತ್ತಿವೆ.
ಶ್ರಾವಣಮಾಸದ ಹಿನ್ನೆಲೆಯಲ್ಲಿ ಈ ಭಾಗದ ಆರಾಧ್ಯದೈವವಾದ ಉಚ್ಚಂಗಿದುರ್ಗದ ಉಚ್ಚಂಗೆಮ್ಮದೇವಿ ದರ್ಶನಕ್ಕೆ ಕಾರು ಹಾಗೂ ಬೈಕ್ಗಳಲ್ಲಿ ಆಗಮಿಸುವ ಭಕ್ತರ ದಂಡು, ತುಂಬಿ ಹರಿಯುತ್ತಿರುವ ಕೆರೆ ಹಾಗೂ ಚೆಕ್ಡ್ಯಾಂಗಳಲ್ಲಿ ಅಕ್ಕಪಕ್ಕದ ನಿಂತುಕೊ೦ಡು, ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಕೊಳ್ಳುವ ಮೂಲಕ ಸಂಭ್ರಮಿಸುತ್ತಿರುವ ದೃಶ್ಯ ಈಗ ಸಾಮಾನ್ಯವಾಗಿದೆ.


ಈ ಭಾಗದ ಯುವಮುಖಂಡ ಫಣಿಯಾಪುರ ಲಿಂಗರಾಜ್ ಅವರು ‘ವಿಜಯಸಿರಿನ್ಯೂಸ್.ಕಾಂ’ ಜತೆ ಮಾತನಾಡಿ, ಚಟ್ನಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಎಸ್.ವಿ. ರಾಮಚಂದ್ರ ಅವರ ದೂರದೃಷ್ಟಿಯ ಹಿನ್ನೆಲೆಯಲ್ಲಿ ವ್ಯರ್ಥವಾಗಿ ಹರಿದುಹೋಗುತ್ತಿದ್ದ ಮಳೆ ನೀರನ್ನು ಚೆಕ್ಡ್ಯಾಂ ನಿರ್ಮಿಸುವ ಮೂಲಕ ತಡೆಯುವ ಯೋಜನೆಗಳನ್ನು ಅವರು ಕೈಗೊಂಡ ಹಿನ್ನೆಲೆಯಲ್ಲಿ ನಮ್ಮಲ್ಲಿ ಚೆಕ್ಡ್ಯಾಂಗಳು ನಿರ್ಮಾಣವಾಗಿವೆ. ಈಗ, ಅವು ಸಂಪೂರ್ಣವಾಗಿ ಮಳೆನೀರು ಭರ್ತಿಯಾಗಿ, ಮೈದುಂಬಿ ಹರಿಯುತ್ತಿವೆ. ಇದು, ನಮ್ಮ ರೈತಾಪಿ ಕುಟಂಬಗಳಲ್ಲಿ ಸಂತಸ ಮನೆಮಾಡಲು ಕಾರಣವಾಗಿದೆ. ಚೆಕ್ಡ್ಯಾಂ ಹಾಗೂ ಕೆರೆಗಳಲ್ಲಿ ನೀರು ಭರ್ತಿಯಾಗಿರುವುದರಿಂದ ಸಹಜವಾಗಿಯೇ ರೈತರ ಜಮೀನುಗಳಲ್ಲಿರುವ ಕೊಳವೆಬಾವಿಗಳಲ್ಲಿನ ಅಂತರ್ಜಲ ಮರುಪೂರಣವಾಗುತ್ತದೆ. ಹೀಗಾಗಿ, ಬೇಸಿಗೆ ಹಂಗಾಮಿನ ಬೆಳೆಗೂ ಈ ಚೆಕ್ಡ್ಯಾಂಗಳು ಸಾಕಷ್ಟು ಉಪಯುಕ್ತವಾಗಿವೆ. ಜತೆಗೆ, ಹಳ್ಳಿಗಳ ಕುಡಿಯುವ ನೀರಿನ ಸಮಸ್ಯೆಗೂ ಮುಕ್ತಿಯಾದಂತಾಗಿದೆ ಎಂದು ಪ್ರತಿಕ್ರಿಯಿಸಿದರು.

