ವಿಜಯಸಿರಿನ್ಯೂಸ್.ಕಾಂ/ ಕೂಡ್ಲಿಗಿ
ಪರಿಶಿಷ್ಟರ ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ನಾಗಮೋಹನದಾಸ್ ನೇತೃತ್ವದ ಆಯೋಗ ಸಲ್ಲಿಸಿರುವ ವರದಿಯೂ ಅವೈಜ್ಞಾನಿಕ ಹಾಗೂ ಅಸಮರ್ಪಕ ಅಂಕಿ- ಸಂಖ್ಯೆಗಳಿಂದ ಕೂಡಿದ್ದು, ಸರ್ಕಾರ ಆಯೋಗ ಸಲ್ಲಿಸಿರುವ ವರದಿಯನ್ನು ಕೈಬಿಡುವಂತೆ ಚಿತ್ರದುರ್ಗ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಆಗ್ರಹಿಸಿದ್ದಾರೆ.
ಒಳಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ನ್ಯಾ. ನಾಗಮೋಹನದಾಸ್ ಆಯೋಗ ಸಲ್ಲಿಸಿರುವ ವರದಿಯಲ್ಲಿನ ಬಹುತೇಕ ಅಂಕಿ ಅಂಶಗಳು, ಅವೈಜ್ಞಾನಿಕವಾಗಿವೆ. ಜತಗೆ, ಪರಿಶಿಷ್ಟ ವರ್ಗದ ಒಳಗೆ ಬರುವ ಕೆಲ ಸಮುದಾಯಗಳನ್ನಷ್ಟೇ ಕೇಂದ್ರೀಕರಿಸಿರುವ ಆಯೋಗ, ಮೀಸಲಾತಿಗೆ ಒಳಪಡುವ ಎಲ್ಲಾ ಸಮುದಾಯಕ್ಕೂ ನ್ಯಾಯಸಮ್ಮತ ಮೀಸಲಾತಿ ಒದಗಿಸುವಲ್ಲಿ ಆಯೋಗ ವಿಫಲವಾಗಿದೆ. ಹೀಗಾಗಿ, ಆಯೋಗ ಸಲ್ಲಿಸಿರುವ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಿ ಆ. 20ರಂದು ಸಮುದಾಯ ಬೃಹತ್ ಸಂಖ್ಯೆಯಲ್ಲಿ ವಿಜಯನಗರ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಚಿತ್ರದುರ್ಗ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಅವರು, ಪ್ರವಾಸಿಮಂದಿರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಂಜಾರ ಸಮುದಾಯ ರಾಜ್ಯದಲ್ಲಿ ಸುಮಾರು 30ಲಕ್ಷಕ್ಕೂ ಅಧಿಕ ಸಂಖ್ಯೆಯನ್ನು ಹೊಂದಿದೆ. ಆದರೆ, ಈ ಪೈಕಿ, ಪ್ರತಿವರ್ಷ ಶೇ. 70ಕ್ಕೂ ಅಧಿಕ ಪ್ರಮಾಣದಲ್ಲಿ ರಾಜ್ಯದಲ್ಲಿನ ಎಲ್ಲಾ ತಾಂಡಾಗಳಿಂದಲೂ ವಿಶೇಷವಾಗಿ ಬಳ್ಳಾರಿ, ವಿಜಯನಗರ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಹಾವೇರಿ ಸೇರಿದಂತೆ ಮಲೆನಾಡಿನ ಕಾಫಿಸೀಮೆ ಸೇರಿದಂತೆ ವಿವಿಧ ಕಡೆಗಳಿಗೆ ವಲಸೆ ಹೋಗುವ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಈ ಅವಧಿಯಲ್ಲಿ ಜಾತಿಗಣತಿಯ ಅಂಕಿ- ಸಂಖ್ಯೆಯ ದತ್ತಾಂಶವನ್ನು ಕ್ರೋಢೀಕರಿಸಿರುವ ಆಯೋಗ, ಸಮುದಾಯದ ಜನಸಂಖ್ಯೆಯನ್ನೇ ನಿಖರವಾಗಿ ಗುರುತಿಸುವಲ್ಲಿ ವಿಫಲವಾಗಿದೆ. ಆಯೋಗದ ವರದಿಯಲ್ಲಿ ಬಂಜಾರ ಸಮುದಾಯ ಕೇವಲ 14ಲಕ್ಷ ಇದೆ ಎಂದು ಗುರುತಿಸಲಾಗಿದೆ. ಹೀಗಾಗಿ, ಆಯೋಗ ಸಲ್ಲಿಸಿರುವ ಒಳಮೀಸಲಾತಿ ವರದಿ ಬಂಜಾರ ಸಮುದಾಯಕ್ಕೆ ಮರಣ ಶಾಸನದಂತಿದೆ. ವಾಸ್ತವಾಂಶವನ್ನು ಮರೆಮಾಚಿ, ಅವೈಜ್ಞಾನಿಕ ಮತ್ತು ಆತುರದಲ್ಲಿ ಕಲೆಹಾಕಿರುವ ಅಂಕಿ- ಸಂಖ್ಯೆಗಳ ಅಸಮರ್ಪಕ ವರದಿಯನ್ನು ಸರ್ಕಾರ ಅನುಷ್ಠಾನಗೊಳಿಸಲು ಮುಂದಾದರೆ, ಭವಿಷ್ಯದ ದಿನಗಳಲ್ಲಿ ಸಮುದಾಯದ ಕಡುಶಾಪಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಸೇವಾಲಾಲ್ ಸ್ವಾಮೀಜಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಬಂಜಾರ ಸಮುದಾಯಕ್ಕೆ ಶೇ. 4.5 ಒಳಮೀಸಲಾತಿ ಘೋಷಣೆ ಮಾಡಿತ್ತು. ಆದರೆ, ಸಮುದಾಯ ಆಗಲೂ, ಅದನ್ನು ಒಪ್ಪದೇ ಸಾಕಷ್ಟು ವಿರೋಧ ವ್ಯಕ್ತಪಡಿಸಿತು. ಆದರೆ, ಈಗ, ಆಯೋಗ ಸಲ್ಲಿಸಿರುವ ವರದಿಯಲ್ಲಿ ಶೇ. 4ರಷ್ಟು ಬಂಜಾರ ಸಮುದಾಯಕ್ಕೆ ಮೀಸಲಾತಿ ಕೊಡಲು ಹೊರಟಿದೆ. ಇದು, ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು, ಇಂಥಹ ಅವೈಜ್ಞಾನಿಕ ಹಾಗೂ ಅಮರ್ಪಕ ವರದಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಅನುಷ್ಠಾನಕ್ಕೆ ಮುಂದಾಗಬಾರದು ಎಂದು ಒತ್ತಾಯಿಸಿ, ಇದೇ ಆ. 20ರಂದು ವಿಜಯನಗರ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮೀಜಿ ಅವರು ಹೇಳಿದರು.
ಆ. 20ರಂದು ಇಡೀ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಬಂಜಾರ ಸಮುದಾಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಗ್ರಾಮದ ಸಂತಸೇವಾಲಾಲ್ ದೇವಸ್ಥಾನದ ಆವರಣದಲ್ಲಿ ಸಮಾಗಮವಾಗಲಿದ್ದಾರೆ. ಬಳಿಕ, ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ, ಪ್ರತಿಭಟನೆ ನಡೆಸಲಾಗುವುದು ಎಂದ ಸ್ವಾಮೀಜಿ ಅವರು, ಇದು ಬಂಜಾರ ಸಮುದಾಯದ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಅಸ್ತಿತ್ವದ ಪ್ರಶ್ನೆಯಾಗಿದ್ದು, ಅಂದಿನ ಪ್ರತಿಭಟನೆಯಲ್ಲಿ ಇಡೀ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಪ್ರತಿ ತಾಂಡಾದ ಸಮುದಾಯ ಭಾಗಿಯಾಗುವ ಮೂಲಕ ವರದಿ ಅನುಷ್ಠಾನಕ್ಕೆ ತೀವ್ರ ತರಹದ ಪ್ರತಿರೋಧ ವ್ಯಕ್ತಪಡಿಸಲು ಪಾಲ್ಗೊಳ್ಳುವಂತೆ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಅವರು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದೂಪದಹಳ್ಳಿ ಶಿವಪ್ರಕಾಶ ಮಹಾರಾಜ ಸ್ವಾಮೀಜಿ, ಬಂಜಾರ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರಾದ ವಾಸುದೇವ ನಾಯ್ಕ, ಪ್ರಕಾಶನಾಯ್ಕ್, ಶಾಮನಾಯ್ಕ್, ಲಾಲ್ಸಿಂಗ್ನಾಯ್ಕ್, ಗೋವಿಂದನಾಯ್ಕ್, ಟಿ. ವೆಂಕಟೇಶ್, ರಾಮನಾಯ್ಕ್, ಬಾಲಾಜಿ, ರವಿನಾಯ್ಕ್, ಪಾಂಡುನಾಯ್ಕ್, ಸುನೀಲ್ನಾಯ್ಕ್, ಭೀಮಾನಾಯ್ಕ್, ರೈತಸಂಘದ ಶೇಕರ್ನಾಯ್ಕ್, ಕೊಟ್ರೇಶ್, ದೂಪದಹಳ್ಳಿ ತಾಂಡ ವೆಂಕಟೇಶ್, ಸೋಮ್ಲನಾಯಕ್, ಮೋತಿಕಲ್ ತಾಂಡದ ನಿವೃತ್ತ ಶಿಕ್ಷಕ ಭೀಮಾನಾಯ್ಕ್, ಹನುಮಾನ್ನಾಯ್ಕ್, ಸುನೀಲಕುಮಾರ್ ಸೇರಿದಂತೆ ವಿವಿಧ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
ಸರ್ಕಾರಕ್ಕೆ ನೈಜ ಕಾಳಜಿ, ಕಳಕಳಿ ಹಾಗೂ ನೈತಿಕೆ ಎಂಬುದು ಇದ್ದರೇ, ಈ ಗುಳೆ ಹೋಗುವ ಪದ್ಧತಿಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಮೂಲಕ, ಬಂಜಾರ ಸಮುದಾಯ, ಅವರು ವಾಸಿಸುವ ಸ್ಥಳದಲ್ಲಿಯೇ ಉದ್ಯೋಗ ಸೃಷ್ಟಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಆ ಮೂಲಕ ಬಂಜಾರ ಸಮುದಾಯದ ಕುಟುಂಬದ ಮಕ್ಕಳು ಶೈಕ್ಷಣಿಕ, ಭಾವನಾತ್ಮಕತೆಯಿಂದ ವಂಚನೆಯಾಗುತ್ತಿರುವುದನ್ನು ತಪ್ಪಿಸಲು ಮುಂದಾಗುವಂತೆ ಸ್ವಾಮೀಜಿ ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಬಂಜಾರ ಗುರುಪೀಠ, ಚಿತ್ರದುರ್ಗ .

