ಟಿಪ್ಪುಸುಲ್ತಾನ ಹುಲಮನಿ.
ವಿಜಯಸಿರಿನ್ಯೂಸ್.ಕಾಂ/ ಬ್ಯಾಡಗಿ
ಬ್ಯಾಡಗಿ :ಬ್ಯಾಡಗಿ ತಾಲೂಕು ಸೇರಿದಂತೆ ಜಿಲ್ಲೆಯ ಸಾವಿರಾರು ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದ್ದು, ಮುಳ್ಳುಸಜ್ಜೆ ಎಂಬ ಮಹಾಮಾರಿ ‘ಕಳೆ’ ಮುಂಗಾರು ಬಿತ್ತನೆ ಸಮಯದಲ್ಲಿ ಅಡ್ಡಿಯಾಗಿ ಈಗ ಆಳೆತ್ತರದಲ್ಲಿ ಬೆಳೆದಿದೆ. ಯಾವುದೇ ಕಳೆನಾಶಕಕ್ಕೂ ನಿಯಂತ್ರಣಕ್ಕೆ ಬಾರದೇ ಬೆಳೆಯೆತ್ತರೆಕ್ಕೆ ಬೆಳೆದು ನಿಂತು ರೈತರ ಬದುಕಿನಲ್ಲಿ ಮಗ್ಗಲು ಮುಳ್ಳಾಗಿ ಪರಿಣಮಿಸಿದ ಪರಿಣಾಮ, ಅನ್ನದಾತ ಈಗ ಅಕ್ಷರಶಃ ಕಂಗಾಲಾಗಿದ್ದಾನೆ.
ಕಳೆದ ಜೂನ ತಿಂಗಳಲ್ಲಿ ಮುಂಗಾರು ಸಮೃದ್ಧವಾಗಿ ಸುರಿದ ಬೆನ್ನಲ್ಲೇ ಕೃಷಿ ಚಟುವಟಿಕೆ ಗರಿಗೆದರಿತ್ತು. 20ರಿಂದ 25ದಿನಗಳಿಂದ ವ್ಯಾಪಕ ಬಿತ್ತನೆ ನಡೆದಿತ್ತು. ಮೊಳಕೆಯೊಡೆದು ಚೋಟುದ್ದ ಬೆಳೆದ ಮೆಕ್ಕೆಜೋಳದ ಸಸಿಯೊಂದಿಗೆ ಮುಳ್ಳುಸಜ್ಜೆಯೂ ಕೂಡ ಸ್ಪರ್ಧೆಗೆ ಬಿದ್ದು ಹುಲುಸಾಗಿ ಬೆಳೆದು ಈಗ ರೈತರ ನಿದ್ದೆಗೆಡಿಸಿದೆ.
ಹೂ ಆರಳುವ ಮುನ್ನವೆ ಕೀಳಬೆಕು: ಗರಿ ಬಿಚ್ಚುವ ಹಂತದಲ್ಲಿ ಮೆಕ್ಕೆಜೋಳದ ಸಸಿಗಳನ್ನೇ ಹೋಲುವ ಮುಳ್ಳುಸಜ್ಜೆ ನಿಯಂತ್ರಣವೇ ಒಂದು ದೊಡ್ಡಸವಾಲಾಗಿದೆ. ಹಲವು ರೈತರು ಈಗಾಗಲೇ ಕಳೆನಾಶಕ ಸಿಂಪಡಿಸಿ, ಅದರ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಕಳೆನಾಶಕಕ್ಕೂ ನಿಯಂತ್ರಣದ ಭರವಸೆ ಕಡಿಮೆ. ಕೆಲ ರೈತರು ಕುಂಟೆ ಹೊಡೆದು ಸಾಲುಗಳ ಮಧ್ಯದ ಕಳೆ ನಿರ್ಮೂಲನೆಗೆ ಮುಂದಾಗಿದ್ದಾರೆ. ಆದರೆ, ಬೆಳೆಯೊಂದಿಗೆ ಸಾಲುಗಳಲ್ಲಿ ಬೆಳೆಯುವ ಮುಳ್ಳುಸಜ್ಜೆ ನಿಯಂತ್ರಣಕ್ಕೆ ಹೂ ಆಗುವ ಮುನ್ನವೇ ಸ್ವತ: ಕೈಯಿಂದ ಕಿತ್ತು ಹೊರಹಾಕಬೇಕು ಅಂದಾಗ ಮಾತ್ರ ಎರಡ್ಮೂರು ವರ್ಷಗಳಲ್ಲಿ ನಿಯಂತ್ರಣದಲ್ಲಿ ಬರುತ್ತದೆ.
ಕಳೆ ಕಿಳಲು ಬರುತ್ತಿಲ್ಲ ಕೂಲಿ ಕಾರ್ಮಿಕರು: ಆರಂಭದಲ್ಲಿ ಮುಳ್ಳುಸಜ್ಜೆ ನಿರ್ಮೂಲನೆ ಮಾಡದಿದ್ದರೆ ಮೆಕ್ಕೆಜೋಳದೊಂದಿಗೆ ಪೈಪೋಟಿಗೆ ಬಿದ್ದಂತೆ ಬೆಳೆಯುತ್ತದೆ. ಕಾಂಡದಲ್ಲಿನ ಸಣ್ಣ ಮುಳ್ಳುಗಳು ಕೊಯ್ಲಿನ ವೇಳೆ ಕಿರಿಕಿರಿ ಉಂಟು ಮಾಡುತ್ತವೆ. ಕೆಲ ಕೂಲಿ ಕಾರ್ಮಿಕರು ಮುಳ್ಳುಸಜ್ಜೆ ಇದ್ದ ಕಡೆ ಕೆಲಸಕ್ಕೆ ಬರಲು ನಿರಾಕರಿಸುತ್ತಾರೆ. ಸದ್ಯ ಸಾಂಪ್ರದಾಯಿಕ ಕಳೆಗಿಂತ ಮುಳ್ಳುಸಜ್ಜೆಯೇ ತಲೆನೋವು ಉಂಟುಮಾಡಿದೆ.
ಏಕ ಬೆಳೆ ಪದ್ದತಿಯೇ ಮುಳ್ಳಾಗಿದೆ: ಮುಳ್ಳುಸಜ್ಜೆ ಕಳೆಯ ವ್ಯಾಪಕತೆಗೆ ಏಕಬೆಳೆ ಪದ್ದತಿಯೇ ಕಾರಣ. ಬೆಳೆ ಪರಿವರ್ತನೆಗೆ ರೈತರು ಸಂಕಲ್ಪ ಮಾಡಬೇಕು. ಕಳೆದೊಂದು ದಶಕದ ಹಿಂದೆ ಸಾವಿ, ನವಣೆ, ಜೋಳ, ತೊಗರಿ, ಗುರೆಳ್ಳು, ಎಳ್ಳು, ಸಾಸವೆ, ಶೇಂಗಾ, ಹತ್ತಿ, ಅಲಸಂದಿ, ಹೆಸರು, ಉದ್ದು, ರಾಗಿ, ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದರು. ಪ್ರತಿ ವರ್ಷ ವಿವಿಧ ಬೆಳೆಯನ್ನು ಬೆಳೆಯುವುದರಿಂದ ಕಳೆನಾಶವಾಗುತಿತ್ತು. ಮೊದಲ 30 ದಿನಗಳಲ್ಲಿ ಕಳೆ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು. ಹತ್ತಿ ಬೆಳೆ ಸೇರಿದಂತೆ ವಿವಿಧ ಬೆಳೆಯನ್ನು ಬಿತ್ತನೆ ಮಾಡುತ್ತಿದ್ದರು. ಇದರಿಂದ ಕಳೆಯಿಂದ ಮುಕ್ತಿ ಹೊಂದಿದ್ದರು. ಅಲ್ಲದೇ ಮುಳ್ಳುಸಜ್ಜೆ ಪ್ರವೇಶ ಇರಲಿಲ್ಲ. ಕಳೆದೊಂದು ದಶಕದಿಂದ ಒಂದೆ ಬೆಳೆಯನ್ನು ಬೆಳೆಯುತ್ತಿರುವುದರಿಂದ ಕಾಲಕಾಲಕ್ಕೆ ಸಣ್ಣ ಕುಂಟಿ (ಎಡೆ) ಹರಗುತಿದ್ದರು. ಇದರಿಂದ ಕಳೆನಾಶವಾಗುತಿತ್ತು. ಈಗ ಮುಳ್ಳು ಸಜ್ಜೆ ಮಹಾಮಾರಿಯಾಗಿ ಕಾಡುತಿದ್ದು. ಇದರಿಂದ ಇಳುವರಿ ಕುಸಿತವಾಗುವುದು ನಿಶ್ಚಿತವಾಗಿದೆ.
ಜಿಲ್ಲೆಯಲ್ಲಿ ಮೆಕ್ಕೆಜೋಳವನ್ನು ಏಕಬೆಳೆ ಪದ್ಧತಿಯಾಗಿ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಕಾಲದಲ್ಲಿ ಬೆಳೆಯುತ್ತಿದ್ದು, ಇದರಿಂದ ಮುಳ್ಳುಸಜ್ಜೆ ಕಳೆಯ ಹಾವಳಿ ಹೆಚ್ಚಾಗಿದೆ. ಮುಳ್ಳು ಸಜ್ಜೆ ಹತೋಟಿ ಮಾಡಲು ರೈತರು ಬೆಳೆ ಪರಿವರ್ತನೆಯನ್ನು ಅಳವಡಿಸಿಕೊಳ್ಳಬೇಕು.
ಬ್ಯಾಡಗಿ ತಾಲೂಕು ಸೇರಿದಂತೆ ಸುತ್ತಲಿನ ತಾಲೂಕುಗಳಲ್ಲಿ ಅತೀ ಹೆಚ್ಚು ಮೆಣಸಿನಕಾಯಿ ಬೆಳೆಯುತ್ತಿದ್ದರು. ಬಳಿಕ ಮುಟುರು ರೋಗದ ಹಾವಳಿಯಿಂದ ರೈತರು ಮೆಣಸಿನಕಾಯಿ ಬೆಳೆ ಬೆಳೆಯುವುದನ್ನು ಬಿಟ್ಟರು. ಈಗ ಮೆಕ್ಕೆಜೋಳವನ್ನು ಬೆಳೆಯಲು ಪ್ರಾಂಭಿಸಿದ್ದಾರೆ. ಇದರಲ್ಲಿ ಮುಳ್ಳುಸಜ್ಜೆ ಕಳೆಯ ಹಾವಳಿಯು ಹೆಚ್ಚಾಗಿದ್ದು, ರೈತರು ತೊಂದರೆ ಅನುಭವಿಸುತ್ತಿದ್ದಾರೆ.
- ಒಂದು ಸಲ ಕಳೆ ಬೀಜವಾದರೆ ಭೂಮಿಯಲ್ಲಿ 7ವರ್ಷಗಳ ಕಾಲದವೆರೆಗೆ ಇರುತ್ತದೆ. ಆದ್ದರಿಂದ ಕಳೆಗಳು ಹೂವಾಡುವ ಮೊದಲು ಕಿತ್ತು ನಾಶಪಡಿಸಬೇಕು. ಬೆಳೆ ಪರಿವರ್ತನೆ ಮಾಡುವುದುರಿಂದ ಮೆಕ್ಕೆಜೋಳ ಬೆಳೆಗೆ ಹೊಂದಿಕೊಂಡಿರುವಂತಹ ಮುಳ್ಳುಸಜ್ಜೆ ಕೆಳೆಯನ್ನು ನಿಯಂತ್ರಿಸಲು ಸಾಧ್ಯ. ಪ್ರತಿವರ್ಷ ಹಂತ ಹಂತವಾಗಿ ರಾಸಾಯನಿಕವನ್ನು ಕಡಿಮೆ ಮಾಡುತ್ತಾ ಬರಬೇಕು. ಅಂದಾಗ ಮಾತ್ರ ಮುಂದಿನ ಪೀಳಿಗೆಗೆ ಆಹಾರ ಉತ್ಪಾದನೆ ಮಾಡಲು ಭೂಮಿ ಉಳಿಯುತ್ತದೆ. ಅದರೊಟ್ಟಿಗೆ ವಿವಿಧ ಬೆಳೆಗಳನ್ನು ಬೆಳೆಯಲು ಮುಂದಾಗಬೆಕು.
- ಗಣೇಶ ಕಮ್ಮಾರ, ಸಹಾಯಕ ಕೃಷಿ ನಿರ್ದೇಶಕರು ಬ್ಯಾಡಗಿ.

