ವಿಜಯಸಿರಿನ್ಯೂಸ್.ಕಾಂ/ ಬ್ಯಾಡಗಿ
ವಿಜ್ಞಾನ- ತಂತ್ರಜ್ಞಾನ ಎಷ್ಟೋ ಆವಿಷ್ಕಾರದ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದರೂ ಸಹ, ಅದರಿಂದ ಪಡೆಯುವ ಜ್ಞಾನಕ್ಕಿಂತಲೂ ಅಗಾಧವಾದ ಜ್ಞಾನದ ಹಸಿವನ್ನು ನೀಗಿಸುವ ಅಮೂಲ್ಯ ಹಾಗೂ ಏಕೈಕ ಸಾಧನ ಎಂದರೆ ಗ್ರಂಥಾಲಯ. ಪುಸ್ತಕಗಳಿಂದ ದೊರೆಯುವ ಜ್ಞಾನದ ಮುಂದೆ ಇನ್ನಾವ ಸಾಧನೂ ಸರಿಸಾಟಿಯಾಗಲಾರದು ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ಪ್ರವೀಣ ಹೊನ್ನಪ್ಪನವರ ಹೇಳಿದರು.
ಬ್ಯಾಡಗಿ ತಾಲೂಕಿನ ಕಲ್ಲೇದೇವರು ಗ್ರಾಮದ ಗ್ರಂಥಾಲಯದ ಸಭಾಂಗಣದಲ್ಲಿ ಏರ್ಪಡಿಸಿದ್ದ ಗ್ರಂಥಾಲಯದ ವಿಜ್ಞಾನ ಪಿತಾಮಹ ಎಸ್.ಆರ್. ರಂಗನಾಥನ್ ಅವರ ಜಯಂತಿ ಕಾರ್ಯಕ್ರಮದಲ್ಲಿ ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಭೂಮಿಯ ಮೇಲಿನ ಪ್ರತಿಯೊಂದು ಜೀವಿಗೂ ಬದುಕಲು ನೀರು, ಗಾಳಿ ಬೆಳಕು ಆಹಾರ ಹೇಗೆ ಮುಖ್ಯವೊ ಹಾಗೆಯೇ ಮನುಷ್ಯ ಮನುಷತ್ವದಿಂದ ನಡೆದುಕೊಳ್ಳಲು, ಮಾನವೀಯಮೌಲ್ಯ, ಮನುಷ್ಯನ ವ್ಯಕ್ತಿತ್ವ, ಮನುಷ್ಯನ ಸರ್ವತೋಮುಖ ಬೆಳವಣಿಗೆ ಆಗಬೇಕಾದರೆ, ಅದು ಪುಸ್ತಕಗಳಿಂದ ಮಾತ್ರ ಸಾಧ್ಯ ಎಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಲ್ಲೇಶ ಮೊಟೇನವರ ಮಾತನಾಡಿ, ಗ್ರಂಥಾಲಯಗಳು ಎಂದರೆ ಜ್ಞಾನದ ಸಾಗರ, ಪುರಾಣ, ಇತಿಹಾಸ ಕಾಲದಿಂದಲೂ ಇಂದಿನ ಡಿಜಿಟಲ್ ಯುಗದವರೆಗೂ ಅನೇಕ ಪಂಡಿತರು, ಸಂಶೋಧಕರು, ಅನುಭಾವಿಗಳು ತಮ್ಮ ಶ್ರಮ, ಸಮಯ, ಜ್ಞಾನ ಉಪಯೋಗಿಸಿ ಮುಂದಿನ ಪೀಳಿಗೆಗೆ ಗ್ರಂಥಸ್ಥವಾಗಿ ಬರೆದಿಟ್ಟಿದ್ದಾರೆ. ಇಂತಹ ಜ್ಞಾನದೇಗುಲವೇ ಗ್ರಂಥಾಲಯ. ಗ್ರಂಥಾಲಯ ಜ್ಞಾನದ ಕಣಜ. ಇದರಲ್ಲಿ ಗ್ರಂಥಪಾಲಕರ ಶ್ರಮ ಬಹಳವಿದೆ. ಓದುಗನಿಗೆ ಜ್ಞಾನದ ಹಸಿವಿಗೆ ಅಗತ್ಯವಾದ ಗ್ರಂಥಭAಡಾರ ಒದಗಿಸುವ ಮಹಾಕಾಯಕದಲ್ಲಿ ಗ್ರಂಥಪಾಲಕ ತೊಡಗಿಸಿಕೊಂಡಿರುತ್ತಾರೆ ಎಂದರು.
ನಮ್ಮ ದೇಶದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ.ಎಸ್.ಆರ್. ರಂಗನಾಥನ್ ಪ್ರಮುಖ ಕಾರಣ. ಗ್ರಂಥಾಲಯ ಸೇವೆಯಲ್ಲಿರುವವರಿಗೆ ರಂಗನಾಥನ್ ಅವರ ಸಂದೇಶಗಳು ಮಾರ್ಗದರ್ಶಕವಾಗಿ ನೆಲೆ ನಿಂತಿವೆ. ಅವರು ನೀಡಿದ ಗ್ರಂಥಾಲಯ ಪಂಚ ಸೂತ್ರಗಳು ಜಗತ್ತಿನ ಮಾನ್ಯತೆ ಪಡೆದುಕೊಂಡಿವೆ. ಗ್ರಂಥಾಲಯ ವಿಜ್ಞಾನವನ್ನು ಭಾರತದಾದ್ಯಂತ ಬೆಳೆಸುವಲ್ಲಿ, ಪ್ರಚಾರ ಮಾಡುವಲ್ಲಿ ಇವರು ಮೊದಲಿಗರು. ದೇಶದಲ್ಲಿ ರಂಗನಾಥನ್ರಷ್ಟು ಗ್ರಂಥಾಲಯದಲ್ಲಿ ಕೃಷಿ ಮಾಡಿದವರು ಮತ್ತೊಬ್ಬರಿಲ್ಲ. ಹಾಗಾಗಿ ಅವರನ್ನು ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಕರೆಯಲಾಗುತ್ತದೆ. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಗ್ರಂಥಾಲಯದ ಮೂಲ ತತ್ವಗಳ ತೋರಣವನ್ನು ತೂಗಿಬಿಡುವಲ್ಲಿ ಅವರ ನಿಷ್ಠೆ ಮತ್ತು ಶ್ರಮ ಅಪಾರವಾದದ್ದು. ಸ್ನಾತಕೋತ್ತರ ಮಟ್ಟದ ಗ್ರಂಥಾಲಯ ವಿಜ್ಞಾನವನ್ನು ಕಲಿಸುವ ವ್ಯವಸ್ಥೆ ಮಾಡುವಲ್ಲಿ ಅವರ ಪಾತ್ರ ಬಹಳಷ್ಟಿದೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಗ್ರಾಂ.ಪಂ. ಉಪಾಧ್ಯಕ್ಷೆ ಪುಷ್ಪಾ ನೇಕಾರ ಹಾಗೂ ಸದಸ್ಯರು, ಕಾರ್ಯದರ್ಶಿ ಜಗದೀಶ ಮಣ್ಣಮ್ಮನವರ, ಸಿಬ್ಬಂದಿ ಸಣ್ಣಕಲ್ಲಪ್ಪ ಲೆಂಕೆಪ್ಪನವರ, ಕಲ್ಲಪ್ಪ ತಳವಾರ, ಗ್ರಂಥಪಾಲಕರಾದ ಪುಷ್ಪಾ ಕೆಂಬಾವಿಮಠ, ಪರಮಯ್ಯ ಪೂಜಾರ, ಸುರೇಶ ಹೂಗಾರ, ಪ್ರಕಾಶ ಮರಗಾಲ, ಹನುಮಂತಪ್ಪ ನಿಂಗಣ್ಣನವರ, ಬಸವಂತಪ್ಪ ಬಸವಣ್ಣನವರ, ಚನ್ನವೀರಯ್ಯ ಹಿರೇಮಠ, ವಿನೋದಾ ಗೌಡರ, ಹನುಮಂತಪ್ಪ ಹುಬ್ಬಳ್ಳಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

