ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ
ಚಲನಚಿತ್ರಗಳ ನಾಯಕ ನಟ, ನಟಿಯರು, ಕ್ರಿಕೆಟ್ ತಂಡದ ಆಟಗಾರರನ್ನು ನಾವು ಆದರ್ಶವಾಗಿಟ್ಟುಕೊಳ್ಳುವ ಬದಲು, ನಮ್ಮ ಬದುಕಿಗೆ ಸನ್ಮಾರ್ಗಕರಾದ ಗುರು ಹಾಗೂ ಬದುಕು ಕಟ್ಟಿಕೊಡಲು ಹೆಣಗುತ್ತಿರುವ ಪೋಷಕರ ಬದುಕೇ ನಮಗೆ ಆದರ್ಶವಾಗಬೇಕಿದೆ; ದಾರಿದೀಪವಾಗಬೇಕಿದೆ ಎಂದು ರಾಣೆಬೆನ್ನೂರು ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ಈ. ಶಿವಕುಮಾರ್ ಹೊನ್ನಾಳಿ ಅಭಿಪ್ರಾಯಪಟ್ಟರು.
ಶನಿವಾರ ನಗರದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಹಿರೇಮೇಗಳಗೇರಿ ಪಾಟೀಲ್ ಸಿದ್ದನಗೌಡ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಪಠ್ಯಪೂರಕ ಚಟುವಟಿಕೆಗಳ ರಾಷ್ಟಿçÃಯ ಸೇವಾ ಯೋಜನೆ ಘಟಕದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭವಿಷ್ಯದ ಬದುಕನನ್ನು ಕಟ್ಟಲು ಹೆಣಗಾಡುತ್ತಿರುವ ಪೋಷಕರನ್ನು ಹಾಗೂ ಬದುಕಿಗೆ ಬೇಕಾದ ದಾರಿತೋರಲು ಯತ್ನಿಸುತ್ತಿರುವ ಗುರು ಪರಂಪರೆಯನ್ನು ಮರೆಯುತ್ತಿರುವ ಇಂದಿನ ಯುವಜನ, ಕ್ರಿಕೆಟ್ ಹಾಗೂ ಚಲನಚಿತ್ರಗಳ ನಟರನ್ನೇ ತಮ್ಮ ನಾಯಕರು ಎಂದು ಆರಾಧಿಸುತ್ತಿದ್ದಾರೆ ಎಂದು ವಿಷಾದಿಸಿದ ಅವರು, ಶೈಕ್ಷಣಿಕ ಹಂತದಲ್ಲಿ ನಾವು ಸಾಧಿಸುವ ಗುರಿ ತಲುಪಬೇಕಾದರೆ, ಕಲಿಕೆಯಲ್ಲಿ ಏಕಾಗ್ರತೆ ಇದ್ದರೇ ಮಾತ್ರ ಸಾಧ್ಯ. ಅದು ಇಲ್ಲದೇ ಹೋದಲ್ಲಿ, ಕಲಿಕೆಯಲ್ಲಿ ಪರಿಪೂರ್ಣತೆ ಸಾಧಿಸಲು ಸಾಧ್ಯವಿಲ್ಲ. ಕಷ್ಟಪಟ್ಟು ಓದುವುದಕ್ಕಿಂತ; ಚೆಂದಾಗಿ, ಇಷ್ಟಪಟ್ಟು ಓದುವ ರೂಢಿಯನ್ನ ಕರಗತ ಮಾಡಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶಗಳು ಅತ್ಯಂತ ವಿರಳವಾಗಿವೆ. ಹೀಗಾಗಿ, ದೊರೆಯುವ ಅವಕಾಶಗಳನ್ನೇ ಸಮರ್ಥವಾಗಿ ಉಪಯೋಗಿಸಿಕೊಳ್ಳುವ ಮೂಲಕ ಅರ್ಥಪೂರ್ಣ ಬದುಕನ್ನು ಕಟ್ಟಿಕೊಳ್ಳುವಂತೆ ಡಾ.ಎಂ.ಈ. ಶಿವಕುಮಾರ್ ಅವರು ಸಲಹೆ ನೀಡಿದರು.
ಸಂಸ್ಥೆಯ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಪಿ. ಮಹಾಬಲೇಶ್ವರಗೌಡ ಅವರು ಮಾತನಾಡಿ, ವಿನಯದೊಂದಿಗೆ ವಿದ್ಯೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಜತೆಗೆ, ಸಂಸ್ಕಾರಯುತ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ ಅವರು, ದೇಶದ ಅಭಿವೃದ್ಧಿಗೆ ಕಂಟಕವಾಗಿರುವ ಭ್ರಷ್ಟರ ವಿರುದ್ಧ ಧ್ವನಿ ಎತ್ತುವ ಹಾಗೂ ಭ್ರಷ್ಟಾಚಾರ ನಿರ್ಮೂಲನೆಗೊಳಿಸುವ ನಿಟ್ಟಿನಲ್ಲಿ ಯುವಜನ ಸಮೂಹ ಕಾರ್ಯೋನ್ಮುಖರಾಗಬೇಕಿದೆ ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ. ಬೆನಕನಕೊಂಡ, ಹಿರಿಯ ವಕೀಲ ಸಿದ್ದಪ್ಪ, ನಿವೃತ್ತ ಪ್ರಾಂಶುಪಾಲ ಜೆ.ಆರ್. ಷಣ್ಮುಖಪ್ಪ, ಉಪನ್ಯಾಸಕರಾದ ಬಿ.ಎಸ್. ಬಸವರಾಜ, ಎನ್ಎಸ್ಎಸ್ ಯೋಜನಾಧಿಕಾರಿ ಮಂಜುನಾಥ ಮಾಳಗಿ, ಸಾಂಸ್ಕೃತಿಕ ಕಾರ್ಯದರ್ಶಿ ಪ್ರದೀಪ್ ಡಿ.ಸಿ. ಮುಖಂಡರಾದ ಚಿದಾನಂದ ಪಾಟೀಲ್, ಉದಯಕುಮಾರ್, ಮಲ್ಲಿಕಾರ್ಜುನ, ಸುಪ್ರಿಯಾ, ಶ್ವೇತಾ ಎಂ.ಬಿ. ಹಾಗೂ ಇತರರು ಹಾಜರಿದ್ದರು.

