ವಿಜಯಸಿರಿನ್ಯೂಸ್.ಕಾಂ/ಹರಪನಹಳ್ಳಿ
ಖಾಸಗೀ ಗೋದಾಮುಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿಟ್ಟುಕೊಂಡಿರುವ ಯೂರಿಯಾ ರಸಗೊಬ್ಬರವನ್ನು ಕೂಡಲೇ ರೈತರಿಗೆ ವಿತರಿಸುವಂತೆ ಒತ್ತಾಯಿಸಿ ನಗರದ ತೆಗ್ಗಿನಮಠದ ಮುಂಭಾಗದ ಖಾಸಗೀ ರಸಗೊಬ್ಬರ ಮಾರಾಟಗಾರರ ಮಳಿಗೆಗಳ ಮುಂದೆ ಸೋಮವಾರ ರೈತರು ದಿಢೀರ್ ಪ್ರತಿಭಟನೆ ನೆಡೆಸಿದರು.
ಕಳೆದ ಹದಿನೈದು ದಿನಗಳಿಂದಲೂ ಯೂರಿಯಾ ರಸಗೊಬ್ಬರದ ಕೊರತೆ ಉಂಟಾಗಿದೆ. ರೈತರು, ರಸಗೊಬ್ಬರಕ್ಕಾಗಿ ಖಾಸಗೀ ಅಂಗಡಿಗಳ ಬಾಗಿಲಿಗೆ ಅಲೆದಾಡಿದರೂ, ಒಂದು ಚೀಲ ಯೂರಿಯಾ ರಸಗೊಬ್ಬರ ದೊರೆಯುತ್ತಿಲ್ಲ. ದಾವಣಗೆರೆ ನಗರದಲ್ಲಾದರೂ, ದೊರೆಯಬಹುದೆಂದು ಅಲ್ಲಿಗೂ ಹೋದರೂ, ನೀವು ವಿಜಯನಗರ ಜಿಲ್ಲೆಯ ರೈತರು, ನಿಮಗೆ ಯೂರಿಯಾ ರಸಗೊಬ್ಬರ ಕೊಡುವುದಿಲ್ಲ ಎಂದು ಅಲ್ಲಿನ ವರ್ತಕರು ಹೇಳುತ್ತಿದ್ದಾರೆ. ಇಲ್ಲಿನ ವರ್ತಕರು ಯೂರಿಯಾ ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸಿ, ರೈತರ ಬದುಕಿನ ಜತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆರೋಪಿಸಿ, ರೈತರ ಗುಂಪು ದಿಢೀರ್ ಪ್ರತಿಭಟನೆಗೆ ಮುಂದಾಯಿತು.
ಗ್ರಾಮಾಂತರ ಪ್ರದೇಶದ ಪ್ರಾಥಮಿಕ ಸಹಕಾರಿ ಸಂಘಗಳಲ್ಲಿಯೂ ಯೂರಿಯಾ ರಸಗೊಬ್ಬರದ ಕೊರತೆ ಇದೆ. ಅಲ್ಲಿಯೂ ನಾಲ್ಕಾರು ದಿನಗಳಿಂದಲೂ ಬೆಳಗಿನಜಾವದಿಂದಲೂ ಸರತಿಸಾಲಿನಲ್ಲಿ ನಿಂತರೂ, ಗೊಬ್ಬರ ಕೈಸೇರುತ್ತಿಲ್ಲ. ಇದಕ್ಕೆಲ್ಲಾ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ. ಅಧಿಕಾರಿಗಳು, ವರ್ತಕರೊಂದಿಗೆ ಶಾಮೀಲಾಗಿ, ಕೃತಕ ಅಭಾವ ಸೃಷ್ಟಿಯಾಗಲು ಕಾರಣರಾಗಿದ್ದಾರೆ ಎಂದು ರೈತರ ಗುಂಪು ಆರೋಪಿಸಿತು.

ಸಹಾಯಕ ಕೃಷಿ ನಿರ್ದೇಶಕ ಉಮೇಶ್ ಅವರು, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ರೈತರ ಜತೆ ಮಾತುಕತೆ ನಡೆಸಿದರು. ಈಗಾಗಲೇ ತಾಲ್ಲೂಕಿಗೆ 51ಟನ್ ಪ್ರಮಾಣದ ಯೂರಿಯಾ ರಸಗೊಬ್ಬರ ದಾಸ್ತಾನಾಗಿದ್ದು, ಈ ಕ್ಷಣದಿಂದಲೇ, ವಿತರಿಸುತ್ತೇವೆ. ರೈತರು, ಸಿಗುವುದಿಲ್ಲ ಎಂಬ ಭ್ರಮೆಯಲ್ಲಿ ಗೊಂದಲಕ್ಕೆ ಮುಂದಾಗಬೇಡಿ ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಆಧಾರ್ಕಾರ್ಡ್ ಆಧಾರದ ಮೇಲೆ ರಸಗೊಬ್ಬರ ವಿತರಿಸುವ ಕ್ರಮವನ್ನು ಕೈಬಿಡಿ ಎಂದು ಸಲಹೆ ನೀಡಿದರು. ಆದರೆ, ಆಧಾರ್ಕಾರ್ಡ್ ರಹಿತವಾಗಿ ರಸಗೊಬ್ಬರ ವಿತರಿಸಲು ನಿಯಮದಲ್ಲಿ ಇಲ್ಲ ಎಂದು ಸಮಜಾಯಿಸಿ ನೀಡಿದರು. ಈ ಮಧ್ಯೆ, ಅಧಿಕಾರಿಗಳು ಮತ್ತು ರೈತರ ಮಧ್ಯೆ ಕೆಲಕಾಲ ವಾಗ್ವಾದಗಳು ಜೋರಾಗಿಯೇ ನಡೆದು, ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಪೊಲೀಸರ ಮಧ್ಯಸ್ಥಿತಿಯಿಂದಾಗಿ ಪರಿಸ್ಥಿತಿಯನ್ನು ತಹಂಬದಿಗೆ ಬಂದನAತರ, ಪ್ರತಿ ರೈತರಿಗೆ, ಎರಡು ಚೀಲ ರಸಗೊಬ್ಬರ ವಿತರಣೆಗೆ ಅವಕಾಶ ಕಲ್ಪಿಸಲಾಯಿತು.
ಹಂತ ಹಂತವಾಗಿ ಯೂರಿಯಾ ರಸಗೊಬ್ಬರವನ್ನು ದಾಸ್ತಾನು ಮಾಡಿಕೊಳ್ಳುವ ಎಲ್ಲಾ ಪ್ರಕ್ರಿಯೆಯನ್ನು ಕೈಗೊಂಡಿದ್ದೇವೆ. ರೈತರು, ತಾಳ್ಮೆಯನ್ನು ಕಳೆದುಕೊಳ್ಳದೇ ಸಹಕಾರ ನೀಡಬೇಕು. ಶೀಘ್ರದಲ್ಲಿಯೇ, ಇನ್ನೂ ಸಮಸ್ಯೆ ನಿವಾರಣೆಗೆ ಮುಂದಾಗುತ್ತೇವೆ ಎಂದು ಸಹಾಯಕ ಕೃಷಿ ನಿರ್ದೇಶಕ ಉಮೇಶ್ ಅವರು ಭರವಸೆ ನೀಡಿದರು.

