ವಿಜಯಸಿರಿನ್ಯೂಸ್.ಕಾಂ/ ವಿಜಯನಗರ (ಹೊಸಪೇಟೆ)
ಸಭೆ, ಸಮಾರಂಭ, ಉತ್ಸವ ಹಾಗೂ ವೇದಿಕೆಗಳಲ್ಲಿ ಸಾಮಾನ್ಯವಾಗಿ ಗ್ರಾಮ ಪಂಚಾಯ್ತಿ ಸದಸ್ಯರಾದಿಯಾಗಿ ಜನಪ್ರತಿನಿಧಿಗಳನ್ನು ಆಮಂತ್ರಿಸುವ ಮೂಲಕ ಕಾರ್ಯಕ್ರಮ ನಡೆಸುವ ಪದ್ಧತಿಯನ್ನು ನಾವು ನೋಡುತ್ತೇವೆ. ಆದರೆ, ಇಲ್ಲೊಂದು ವೇದಿಕೆಯಲ್ಲಿ ಶತಕದ ಗಡಿಯಲ್ಲಿರುವ ಹಿರಿಯ ಜೀವಿಯೊಬ್ಬರನ್ನು ಆಹ್ವಾನಿಸುವ ಮೂಲಕ ಅವರಿಂದಲೇ ಧ್ವಜಾರೋಹಣ ನೆರೆವೇರಿಸಿ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ.
ಅದು ಎಲ್ಲಿ….? ಅಂತೀರಾ… ! ಹಾಗಾದಾರೆ ಈ ಸುದ್ದಿಯನ್ನು ಓದಿ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಂಪಾಪಟ್ಟಣ ಗ್ರಾಮದ ಅಲೆಮಾರಿ ಸುಡುಗಾಡಸಿದ್ಧರ ಸಮುದಾಯದ ಕಾಲೊನಿಯ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಇಂಥಹ ವಿಶಿಷ್ಟಕ್ಕೆ ಸಾಕ್ಷಿಯಾಗಿದೆ. ಗ್ರಾಮದ ಸುಡುಗಾಡಸಿದ್ಧರ ಸಮುದಾಯಕ್ಕೆ ಸೇರಿದ 98ರ ವಯೋವೃದ್ಧೆ ಕಿನ್ನೂರಿ ಮರಿಯಮ್ಮ ಎಂಬ ಅಜ್ಜಿ ಧ್ವಜಾರೋಹಣ ನೇರವೇರಿಸುವ ಮೂಲಕ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು
ತಂದಿದ್ದಾರೆ
ಕಾಲೊನಿಯ ವೃತ್ತದಲ್ಲಿ ಅಲೆಮಾರಿ ಸುಡುಗಾಡಸಿದ್ಧರ ಯುವಕ ಸಂಘದ ಸದಸ್ಯರು ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ವ್ಯವಸಾಯ ಸೇವಾ ಸಹಕಾರಿ ಕೃಷಿಪತ್ತಿನ ಸಂಘದ ಮಾಜಿ ನಿರ್ದೇಶಕಿಯೂ ಆಗಿರುವ ವಯೋವೃದ್ಧೆ ಕಿನ್ನೂರಿ ಮರಿಯಮ್ಮ ಉತ್ಸಾಹದಿಂದಲೇ ಧ್ವಜಾರೋಹಣ ನೆರವೇರಿಸಿ, ಯುವಸಮುದಾಯಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.
ಕಾರ್ಯಕ್ರಮ ನಿರೂಪಿಸಿದ ಜಾನಪದ ಕಲಾವಿದ ನಾಗರಾಜ ಗಂಟಿ ಅವರು ಈ ಸಂದರ್ಭದಲ್ಲಿ ಮಾತನಾಡಿ, ದೇಶವನ್ನು ಪರಾಕೀಯರ ಕಪಿಮುಷ್ಠಿಯಿಂದ ವಿಮೋಚನೆಗೊಳಿಸುವ ನಿಟ್ಟಿನಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನರ ತ್ಯಾಗ, ಬಲಿದಾನಗಳು ಸಮರ್ಪಣೆಯಾಗಿವೆ. ಅಂಥಹ ಹಿರಿಯ ಚೇತನಗಳನ್ನು ಸ್ಮರಿಸುವ ಮೂಲಕ ಅವರ ಆದರ್ಶ, ಕನಸುಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ಸಣ್ಣ ಕೊಡುಗೆಯಾದರೂ ನೀಡಿದಾಗ ಮಾತ್ರ, ಅವರ ಆದರ್ಶಗಳನ್ನ ಪಾಲಿಸಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ನಮಗೆ ಆದರ್ಶಪ್ರಾಯವಾಗಿರುವ ನಮ್ಮೂರಿನ, ಅಲೆಮಾರಿ ಸುಡುಗಾಡುಸಿದ್ಧ ಸಮುದಾಯದ ಹಿರಿಯರಾದ ಹಾಗೂ ಸ್ವಾತಂತ್ರ್ಯ ಚಳವಳಿಯ ಸಾಕ್ಷಿಯಾಗಿರುವ ಕಿನ್ನೂರಿ ಮರಿಯಮ್ಮ ಧ್ವಜಾರೋಹಣ ನೆರವೇರಿಸಿದ್ದು ನಮ್ಮೆಲ್ಲರ ಸೌಭಾಗ್ಯ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಗಾಳೆಪ್ಪ, ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕಿನ್ನೂರಿ ಮಹೇಶ್, ಮಾಜಿ ನಿರ್ದೇಶಕ ಸಣ್ಣಮಂಜುನಾಥ ಗಂಟಿ, ಕಾಲೊನಿಯ ಮುಖಂಡರಾದ ಅಯ್ಯಪ್ಪ, ಗೀತಾ ಯಲ್ಲಪ್ಪ ಪತ್ರಿ, ಕಿನ್ನೂರಿ ಸೋಮನಾಥ, ಮಲ್ಲಪ್ಪ, ನಾಗರಾಜ ಮುಡಬಿ, ಉಮೇಶ್ ಗಂಟಿ, ವಿಠಲ್, ಸಂತೋಷ್ ಗಂಟಿ, ಉಮೇಶ್ ಮುದ್ದಿ, ಅಶೋಕ ಮುದ್ದಿ, ಎಸ್.ಕೆ. ಮಂಜುನಾಥ, ಆನಂದ, ವಡ್ಡರ ಹಾಲಪ್ಪ, ದುರುಗಪ್ಪ, ಮೌಲಪ್ಪ, ಗ್ರಾಮದ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
98ರ ವಯೋಮಾನದ ಹಿರಿಯರಾದ ಕಿನ್ನೂರಿ ಮರಿಯಮ್ಮ ಇವರಿಂದ ಧ್ವಜಾರೋಹಣ ನೆರವೇರಿಸಲು ಆಮಂತ್ರಣ ನೀಡಿ, ಅವಕಾಶ ಕಲ್ಪಿಸಿದ ಗ್ರಾಮದ ಕಾಲೊನಿಯ ಯುವಕಸಂಘದ ಪದಾಧಿಕಾರಿಗಳಿಗೂ, ಹಾಗೂ ಸಮಸ್ತ ಗ್ರಾಮಸ್ಥರಿಗೂ ಅಲೆಮಾರಿ ಸುಡುಗಾಡಸಿದ್ಧ ಕ್ಷೇಮಾಭಿವೃದ್ಧಿ ಸಂಘದ ಹೊಸಪೇಟೆ ತಾಲ್ಲೂಕು ಘಟಕದ ಅಧ್ಯಕ್ಷರು ಹಾಗೂ ಅಲೆಮಾರಿ ಬುಡಕಟ್ಟು ವಿಮುಕ್ತ ಒಕ್ಕೂಟದ ವಿಜಯನಗರ ಜಿಲ್ಲಾ ಉಪಾಧ್ಯಕ್ಷರಾದ ಕಿನ್ನೂರಿ ಶೇಖಪ್ಪ ಅವರು ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

