ವಿಜಯಸಿರಿನ್ಯೂಸ್.ಕಾಂ// ಹರಪನಹಳ್ಳಿ
ತಾಲ್ಲೂಕಿನ ಹಲುವಾಗಲು ಗ್ರಾಮದಲ್ಲಿ ಕಳೆದ ಮೂರು ದಶಕಗಳಿಂದಲೂ ವಾಸವಾಗಿರುವ ವಸತಿರಹಿತ ಸಿಂಧೋಳ್ ಅಲೆಮಾರಿ ಕುಟುಂಬಗಳ ತಲೆಯ ಮೇಲೊಂದು ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ರಾಜ್ಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಲ್ಲಿಕಾರ್ಜುನ ಭರವಸೆ ನೀಡಿದರು.
ಹಲುವಾಗಲು ಗ್ರಾಮದ ಹೊರವಲಯದಲ್ಲಿ ವಾಸವಾಗಿರುವ ಸಿಂಧೋಳ್ ಅಲೆಮಾರಿ ಕುಟುಂಬಗಳ ಬಿಡಾರಕ್ಕೆ ಭೇಟಿ ನೀಡಿ, ವಾಸ್ತವಸ್ಥಿತಿ ಪರಿಶೀಲಿಸಿದ ಅವರು, ಬಳಿಕ, ಸಾಂಕೇತಿಕವಾಗಿ ತಾಡಪಾಲು ವಿತರಿಸಿ ಅವರು ಮಾತನಾಡಿದರು.
ಇಲ್ಲಿ ವಾಸವಾಗಿರುವ ಸಿಂಧೋಳ್ ಸಮುದಾಯ ಬಟ್ಟೆಯಿಂದ ತಯಾರಿಸಿದ ಜೋಪಡಿಗಳಲ್ಲಿ ವಾಸವಾಗಿದೆ. ಆ ಬಟ್ಟೆಗಳು ಮಳೆ, ಚಳಿ ಹಾಗೂ ಬಿಸಿಲಿನ ಹೊಡೆತಕ್ಕೆ ಕಟ್ಟಿಕೊಂಡ ಆರೇಳು ತಿಂಗಳಲ್ಲಿಯೇ ನಾಶವಾಗಲಿದೆ. ಹೀಗಾಗಿ, ಸದ್ಯಕ್ಕೆ ತಾತ್ಕಾಲಿಕವಾಗಿ ಇಲ್ಲಿ ವಾಸಿಸುವ ಎಲ್ಲಾ ಕುಟುಂಬಗಳಿಗೂ, ಗುಣಮಟ್ಟದ ತಾಡಪಾಲುಗಳ ಜೋಪಡಿ ನಿರ್ಮಿಸಿಕೊಳ್ಳಲು ನಿಗಮವೂ ತಾಡಪಾಲು ವಿತರಿಸುತ್ತಿದೆ. ಇಂದು ಸಾಂಕೇತಿಕವಾಗಿ ತಾಡಪಾಲು ವಿತರಣೆ ಮಾಡಲಾಗಿದ್ದು, ಶೀಘ್ರದಲ್ಲಿಯೇ ಶಾಸಕರು, ಎಲ್ಲಾ ಕುಟುಂಬಗಳಿಗೂ ತಾಡಪಾಲು ವಿತರಿಸಲಿದ್ದಾರೆ. ಜತೆಗೆ, ಇಲ್ಲಿನ ಅಲೆಮಾರಿ ಕುಟುಂಬಗಳಿಗೆ ಶಾಶ್ವತ ನಿವೇಶನ ಅಥವಾ ಸೂರು ಒದಗಿಸಬೇಕೆಂಬ ಬೇಡಿಕೆ ತುಂಬಾ ವರ್ಷದಿಂದಲೂ ಇದೆ. ಆದರೆ, ಗ್ರಾಮದ ಸರಹದ್ದಿನಲ್ಲಿ ಸರ್ಕಾರಿ ಭೂಮಿ ಲಭ್ಯವಾಗದ ಹಿನ್ನೆಲೆಯಲ್ಲಿ ನಿವೇಶನ ಒದಗಿಸಲು ವಿಳಂಬವಾಗಿದೆ. ಕಳೆದ ನಾಲ್ಕಾರು ವರ್ಷಗಳಿಂದಲೂ ಗ್ರಾಮವೂ ಸೇರಿದಂತೆ ಅಕ್ಕಪಕ್ಕದ ಗ್ರಾಮದ ಬಳಿಯೂ ನಿವೇಶನ ಗುರುತಿಸಲಾಗಿದೆ. ಆ ಎಲ್ಲಾ ನಿವೇಶನಗಳು ವಿವಿಧ ಕಾರಣಗಳಿಂದ ಸ್ವಾಧೀನ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಖಾಸಗೀ ವ್ಯಕ್ತಿಗಳ ಜಮೀನು ಲಭ್ಯ ಇದ್ದರೇ, ಖರೀದಿಸುವ ಮೂಲಕ ನಿವೇಶನ ಹಂಚಿಕೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಮಲ್ಲಿಕಾರ್ಜುನ ಅವರು ತಿಳಿಸಿದರು.
ಬಿಡಾರದಲ್ಲಿ ವಾಸಿಸುವ ಅಲೆಮಾರಿ ಸಿಂಧೋಳ್ ಕುಟುಂಬದ ವಸತಿ ಪ್ರದೇಶಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆ, ಬೆಳಕಿನ ವ್ಯವಸ್ಥೆ ಕಲ್ಪಿಸುವಂತೆ ಸ್ಥಳದಲ್ಲಿ ಹಾಜರಿದ್ದ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಲ್ಲಿಕಾರ್ಜುನ ಸೂಚನೆ ನೀಡಿದರು.
ಜತೆಗೆ, ಅಲೆಮಾರಿ ಕುಟುಂಬಗಳು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ ಬದುಕಿನ ಬದಲಾವಣೆಯತ್ತ ಮಗ್ಗಲು ಬದಲಾಯಿಸಿ, ಸಮಾಜದ ಮುಖ್ಯವಾಹಿನಿಯಲ್ಲಿ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ; ಪರಿಶಿಷ್ಟ ಪಂಗಡದ ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತೀ ಅತಿಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ಅನುಷ್ಠಾನ ಸಮಿತಿ ಜಿಲ್ಲಾಸಮಿತಿ ಸರ್ಕಾರಿ ನಾಮನಿರ್ದೇಶನ ಸದಸ್ಯ ವಿ. ಸಣ್ಣಅಜ್ಜಯ್ಯ ಸೇರಿದಂತೆ ಸಿಂಧೋಳ್ ಸಮಾಜದ ಹಿರಿಯರು ಹಾಜರಿದ್ದರು.

