ರಕ್ತದಾನ ರೋಗಿಯ ಪಾಲಿಗೆ ಸಂಜೀವಿನಿ: ಡಾ. ಬಸವರಾಜ
ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ಮಹಿಳೆಯರ ಹೆರಿಗೆ, ಅಪಘಾತ ಸೇರಿದಂತೆ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳ ಪಾಲಿಗೆ ಹನಿ ರಕ್ತವೂ ಸಹ ಸಂಜೀವಿನಿಯಾಗಿರುವುದರಿAದ ಆರೋಗ್ಯವಂತ ಯುವಕರು ರಕ್ತದಾನ ಮಾಡುವ ಮೂಲಕ ರೋಗಿಗಳ ಪಾಲಿಗೆ ಆಸರೆಯಾಗಬೇಕಿದಾಗ ಅಗತ್ಯತೆ ಇದೆ ಎಂದು ಡಾ. ಬಸವರಾಜ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಅಣಜಿಗೆರೆ ಗ್ರಾಮದಲ್ಲಿ ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪುಣಭಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹೊಸಪೇಟೆಯ ಶ್ರೀಮತಿ ವಾಸುದೇವಭಟ್ ರಕ್ತದಾನ ಕೇಂದ್ರ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಜ್ಞಾನ ತಂತ್ರಜ್ಞಾನದ ಆವಿಷ್ಕಾರಗಳು ಎಷ್ಟೇ ಪ್ರಮಾಣದಲ್ಲಿ ಮುಂದುವರೆದಿದ್ದರೂ ಸಹ, ರಕ್ತವನ್ನು ಕೃತಕವಾಗಿ ತಯಾರಿಸಲು ಅಸಾಧ್ಯವಾಗಿದೆ. ಹೀಗಾಗಿ, ಮನುಷ್ಯ- ಮನುಷ್ಯನಿಗೆ ನೆರವಾಗಬೇಕಾಗಿದೆ. ರಕ್ತಹೀನತೆಯಿಂದ ಬಳಲುವ ಮೂಲಕ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ರೋಗಿಗಳಿಗೆ ರಕ್ತದ ಅಗತ್ಯತೆ ಜರೂರಿರುತ್ತದೆ. ಹೀಗಾಗಿ, ಆರೋಗ್ಯವಂತ ಯುವಕರು ರಕ್ತದಾನ ಮಾಡುವ ಮೂಲಕ ರಕ್ತಹೀನತೆಯಿಂದ ಬಳಲುವ ರೋಗಿಗೆ ಪುನರ್ಜನ್ಮ ಕೊಡಲು ಮುಂದಾಗಬೇಕು ಎಂದು ಕರೆ ನೀಡಿದರು.
ರಕ್ತದಾನ ಕುರಿತಂತೆ ನಮ್ಮ ನಡುವೆ ಅನೇಕ ಮೂಢನಂಬಿಕೆಗಳು ಮನೆ ಮಾಡಿವೆ. ಆದರೆ, ಅಂಥಹ ಮೂಢನಂಬಿಕೆಗಳನ್ನು ತೊರೆಯುವ ಮೂಲಕ ೧೮ರಿಂದ ೬೦ವರ್ಷದ ವಯೋಮಾನದವರೆಗಿನ ಎಲ್ಲಾ ಆರೋಗ್ಯವಂತ ಯುವಕರು ರಕ್ತದಾನ ಮಾಡಬಹುದು. ಜತೆಗೆ, ರಕ್ತದಾನವನ್ನು ಆಗಾಗ್ಗೆ ಮಾಡುವುದರಿಂದ ನಮ್ಮ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುವ ಮೂಲಕ ನಾವು ಸಹ ಆರೋಗ್ಯವಂತರಾಗಿರಲು ಸಾಧ್ಯ. ರಕ್ತದಾನ ಮಾಡುವುದರಿಂದ ಹೃದಯಾಘಾತದಂತ ಕಾಯಿಲೆಗಳನ್ನು ನಾವು ತಡೆಯಲು ಸಾಧ್ಯ ಎಂದು ಡಾ. ಬಸವರಾಜ ಅವರು ತಿಳಿಸಿದರು.
ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಉಮೇಶ್ ತಾಳಿಕಟ್ಟೆ ಅವರು ಮಾತನಾಡಿ, ಎಲ್ಲಾ ದಾನಗಳಿಗಿಂತಲೂ ರಕ್ತದಾನ ಅತ್ಯಂತ ಶ್ರೇಷ್ಠದಾನವಾಗಿದೆ. ಅನ್ನದಾನ ಸೇರಿದಂತೆ ಇತರೆ ದಾನಗಳು ಆ ಕ್ಷಣದ ಸಂತೃಪ್ತಿಯನ್ನು ನೀಡಿದರೆ, ರಕ್ತದಾನ ಎಂಬ ಈ ಮಹಾದಾನ ರಕ್ತಹೀನತೆಯ ರೋಗಿಯ ಪಾಲಿಗೆ ಪುನರ್ಜನ್ಮ ನೀಡುತ್ತದೆ. ಹೀಗಾಗಿ, ರಕ್ತದಾನ ಮಾಡಲು ಯುವಕರು ಮುಂದಾಗಬೇಕು ಎಂದು ಕರೆ ನೀಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೀತಾ ಚಂದ್ರಪ್ಪ, ಮುಖಂಡರಾದ ಕಾರಿಹಳ್ಳಿ ಮಂಜಪ್ಪ, ಉಮೇಶ್ ಪಾಟೀಲ್, ಆರೋಗ್ಯ ಇಲಾಖೆಯ ಎಂ.ಆರ್. ನಾಗರಾಜ, ಸಿಬ್ಬಂದಿ ಉಷಾ, ಕೃಷ್ಣಮ್ಮ, ಸಂತೋಷ್, ಸುಧಾ, ಕಲ್ಲಮ್ಮ ಸಬೀನಾಬಾನು, ಕೆ. ಸುಧಾ ಹಾಗೂ ಆಶಾ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಿಬಿರದಲ್ಲಿ ೧೩ಜನ ಯುವಕರು ರಕ್ತದಾನ ಮಾಡಿದರು.

