ವಿಜಯಸಿರಿನ್ಯೂಸ್.ಕಾಂ/ಕೂಡ್ಲಿಗಿ
ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಹರಿಹರ ಘಟಕದ ಬಸ್ ಚಾಲಕ ರಾಮಲಿಂಗಪ್ಪ ಎಂಬುವವರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸುವ ಜತೆಗೆ, ಸಾರ್ವಜನಿಕವಾಗಿ ಚಪ್ಪಲಿಯಿಂದ ಹೊಡೆದು, ಅಶ್ಲೀಲವಾಗಿ ನಿಂದಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೂಡ್ಲಿಗಿ ಪೊಲೀಸ್ ಠಾಣೆಯ ಮುಖ್ಯಪೇದೆ ಮಂಜುನಾಥ ಎಂಬುವವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶನಿವಾರ ಆದೇಶ ಹೊರಡಿಸಿದ್ದಾರೆ.

ಗುರುವಾರ ಬೆಳಿಗ್ಗೆ ಸಾರಿಗೆ ಸಂಸ್ಥೆಯ ಬಸ್ ಹರಿಹರದಿಂದ ಕೊಟ್ಟೂರು, ಕೂಡ್ಲಿಗಿ ಮಾರ್ಗವಾಗಿ ಬಳ್ಳಾರಿಗೆ ಕಾರ್ಯಚರಣೆ ನಡೆಸುವ ಸಂದರ್ಭದಲ್ಲಿ, ಕೊಟ್ಟೂರು ಹೊರವಲಯದ ಮಲ್ಲನಾಯಕನಹಳ್ಳಿ ಕ್ರಾಸ್ ಬಳಿ, ಬಸ್ ಮುಂದೆ ಚಲಿಸುತ್ತಿದ್ದ ಬೈಕ್ ಅನ್ನು ಹಿಂದಿಕ್ಕಲು ಹೋದ ಬಸ್ ಚಾಲಕ ರಾಮಲಿಂಗಪ್ಪ ಅವರು, ಎದುರಿಗೆ ಬಂದ ಕಾರನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಪುನಃ ಬಸ್ ಅನ್ನು ರಸ್ತೆ ಮೇಲೆ ತಿರುಗಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬೈಕ್ನಲ್ಲಿ ಸಂಚರಿಸುತ್ತಿದ್ದ ಕೂಡ್ಲಿಗಿ ಠಾಣೆಯ ಮುಖ್ಯಪೇದೆ ಮಂಜುನಾಥ ಬೈಕ್ಗೆ ಬಸ್ ತಾಕೀದೆ ಎಂದು ಕುಪಿತಗೊಂಡು, ಬಸ್ ಅನ್ನು ಹಿಂಬಾಲಿಸಿ, ಕೂಡ್ಲಿಗಿ ಸಮೀಪದ ಗಜಾಪುರ ಗ್ರಾಮದ ಬಳಿ, ಬಸ್ ಅನ್ನು ಅಡ್ಡಗಟ್ಟಿ, ಚಾಲಕ ರಾಮಲಿಂಗಪ್ಪ ಅವರನ್ನು ಬಾಯಿಗೆ ಬಂದಂತೆ ಅಶ್ಲೀಲವಾಗಿ ನಿಂದಿಸುವ ಜತೆಗೆ, ಚಪ್ಪಲಿಯಿಂದ ಹಾಗೂ ಹೆಲ್ಮೆಟ್ನಿಂದ ಮನಬಂದಂತೆ ಹಿಗ್ಗಾಮುಗ್ಗಾ ಥಳಿಸುವ ಮೂಲಕ ತಾನೊಬ್ಬ ಪೊಲೀಸ್ ಪೇದೆ ಎಂಬ ದರ್ಪದಿಂದ ಗೂಂಡಾಗಿರಿ ಮೆರೆದಿದ್ದನು. ಈ ಕುರಿತು, ವಿಜಯಸಿರಿನ್ಯೂಸ್.ಕಾಂ ವಿಸ್ತೃತ ವರದಿ ಪ್ರಕಟಿಸಿತ್ತು. ಜತೆಗೆ, ಹಲ್ಲೆ ನಡೆಸುತ್ತಿರುವ ದೃಶ್ಯದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಈ ಕುರಿತಂತೆ ರಾಮಲಿಂಗಪ್ಪ ನೀಡಿದ ದೂರಿನನ್ವಯ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂಬರ್: 135/2025ರ ಅಡಿ ಕಲಂ 126(2),352, 132 ಹಾಗೂ ಬಿಎನ್ಎಸ್ 23ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತಂತೆ ಕೂಡ್ಲಿಗಿ ಉಪವಿಭಾಗದ ಉಪಾಧೀಕ್ಷಕರು ಸಲ್ಲಿಸಿದ ವರದಿಯನ್ನು ಆಧರಿಸಿ, ಹಾಗೂ ಶಿಸ್ತಿಗೆ ಹೆಸರಾದ ಪೊಲೀಸ್ ಇಲಾಖೆಯಲ್ಲಿದ್ದುಕೊಂಡು, ಸಮಸ್ಯೆಯನ್ನು ಕಾನೂನಿನ ಪರಿಮಿತಿಯಲ್ಲಿಯೇ ಇತ್ಯರ್ಥಪಡಿಸಿಕೊಳ್ಳದೇ, ಬಸ್ ಚಾಲಕನ ಮೇಲೆ ದೈಹಿಕ ಹಲ್ಲೆ ನಡೆಸುವ ಜತೆಗೆ, ಅಶ್ಲೀಲವಾಗಿ ಬಾಯಿಗೆಬಂದಂತೆ ಬೈಯುವ ಮೂಲಕ ಇಲಾಖೆಯ ಬಗ್ಗೆ ಸಾರ್ವಜನಿಕರಲ್ಲಿ ಅಗೌರವ ಉಂಟುಮಾಡುವಂತೆ ವರ್ತಿಸಿದ ಹಿನ್ನೆಲೆಯಲ್ಲಿ ಮುಖ್ಯಪೇದೆ ಮಂಜುನಾಥ ಎಂಬುವವರನ್ನು ತತ್ಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಿ, ಷರತ್ತುಗಳನ್ನು ವಿಧಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.

