ವಿಜಯಸಿರಿನ್ಯೂಸ್.ಕಾಂ/ ವಿಜಯನಗರ(ಹೊಸಪೇಟೆ)
ಕುರಿಹಟ್ಟಿಯ ಹಟ್ಟಿಯ ಮೇಲೆ ದಾಳಿ ನಡೆಸಿದ ಬೀದಿನಾಯಿಗಳ ಹಿಂಡು 23ಕುರಿಮರಿಗಳನ್ನು ಸಾಯಿಸಿರುವ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಹೊಳಗುಂದಿ ಗ್ರಾಮದ ನಿಜಲಿಂಗಪ್ಪ ನಗರದ ಸಮೀಪದ ಭಾನುವಾರ ನಡೆದಿದೆ.
ಗ್ರಾಮದ ಕುರಿಗಾಹಿ ಹುಲುಗಪ್ಪ ಎಂಬುವವರಿಗೆ ಸೇರಿದ ಕುರಿಹಟ್ಟಿಯಲ್ಲಿ ಮರಿಗಳನ್ನು ಕೂಡಿಹಾಕಲಾಗಿತ್ತು. ಆದರೆ, ಬೀದಿನಾಯಿಗಳ ಹಿಂಡು ಹಟ್ಟಿಯ ಮೇಲೆ ದಾಳಿ ನಡೆಸುವ ಮೂಲಕ ಹಟ್ಟಿಯಲ್ಲಿದ್ದ ಮರಿಗಳನ್ನು ಕಚ್ಚಿಹಾಕಿವೆ. ಬೀದಿ ನಾಯಿಗಳ ದಾಳಿಯಿಂದಾಗಿ, ಹುಲುಗಪ್ಪ ಅವರಿಗೆ ಸೇರಿದ 20ಕುರಿಮರಿ, ಕಂದಗಲ್ ಶಿವರಾಜ ಅವರಿಗೆ ಸೇರಿದ 2ಮರಿ ಮತ್ತು ದೊಡ್ಡಬಸಪ್ಪ ಎಂಬುವವರಿಗೆ ಸೇರಿದ 1ಕುರಿಮರಿ ಸಾವನ್ನಪ್ಪಿವೆ.
ಮರಿಕುರಿಗಳನ್ನು ಹಟ್ಟಿಯಲ್ಲಿ ಕೂಡಿಹಾಕಿ, ಎಂದಿನಂತೆ ಕುರಿಗಳನ್ನು ಮೇಯಿಸಲು ಅಡವಿಗೆ ಹೋದ, ಸಂದರ್ಭದಲ್ಲಿ ನಾಯಿಗಳ ಹಿಂಡು ಹಟ್ಟಿಯ ಮೇಲೆ ದಾಳಿ ನಡೆಸಿವೆ. ನಾಯಿಗಳ ಹಿಂಡು ದಾಳಿ ನಡೆಸಿದ ಹಿನ್ನೆಯಲ್ಲಿ ಕುರಿಗಾಹಿಗಳ ಲಕ್ಷಾಂತರ ರೂಪಾಯಿ ನಷ್ಟಕ್ಕೆ ಸಿಲುಕಿದ್ದಾರೆ.
ಕುರಿ ಹಟ್ಟಿಯ ಮೇಲೆ ಬೀದಿ ನಾಯಿಗಳು ಆಗಾಗ್ಗೆ ದಾಳಿ ನಡೆಸುತ್ತಿರುವ ಪರಿಣಾಮ, ಕುರಿ ಹಾಗೂ ಮರಿಗಳು ಹಾನಿಗೆ ಒಳಗಾಗುತ್ತಿವೆ. ಹೀಗಾಗಿ, ಕುರಿಗಾಹಿಗಳು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಇಲಾಖೆಗಳು ಬೀದಿನಾಯಿಗಳ ಉಪಟಳಕ್ಕೆ ಕಡಿವಾಣ ಹಾಕುವ ಮೂಲಕ, ಸಂಕಷ್ಟಕ್ಕೆ ಸಿಲುಕಿದ ಕುರಿಗಾಹಿಗಳ ನೆರವಿಗೆ ಮುಂದಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.

