ವಿಜಯಸಿರಿನ್ಯೂಸ್.ಕಾಂ/ ಹರಪನಹಳ್ಳಿ
ತಾಲ್ಲೂಕಿನ ಅರಸೀಕೆರೆ ಹೋಬಳಿ ವ್ಯಾಪ್ತಿಯ ಉಚ್ಚಂಗಿದುರ್ಗ ಗ್ರಾಮದ ಸರ್ವೇ ನಂಬರ್ 389ರಲ್ಲಿ ಸರ್ಕಾರವೇ ವಿತರಿಸಿದ ಆಶ್ರಯ ಪ್ಲಾಟ್ ನಿವಾಸಿಗಳಿಗೆ ಖಾಸಗೀ ವ್ಯಕ್ತಿ ನೀಡುತ್ತಿರುವ ಕಿರುಕುಳವನ್ನು ತಡೆಯುವ ಮೂಲಕ ನೆಮ್ಮದಿಯ ಬದುಕು ಜೀವಿಸಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ನೇತೃತ್ವದಲ್ಲಿ ಅಲ್ಲಿನ ನಿವಾಸಿಗಳು, ಹರಪನಹಳ್ಳಿ ನಗರದ ತಹಶೀಲ್ದಾರ್ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.
ಪಕ್ಷದ ಪದಾಧಿಕಾರಿಗಳ ನೇತೃತ್ವದಲ್ಲಿ ತಾಲ್ಲೂಕು ಕಚೇರಿಗೆ ತಲುಪಿದ ಅಲ್ಲಿನ ನಿವಾಸಿಗಳು, ಬಳಿಕ ಬಹಿರಂಗ ಸಭೆ ನಡೆಸಿದರು.
ತಾಲ್ಲೂಕಿನ ಐತಿಹಾಸಿಕ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉಚ್ಚಂಗಿದುರ್ಗ ಗ್ರಾಮದ ಹೊರವಲಯದ ಸರ್ವೇ ನಂಬರ್ 389ರಲ್ಲಿ 2002ರಲ್ಲಿಯೇ ಅಲ್ಲಿನ ನಿವೇಶನರಹಿತ ಬಡ ಕುಟುಂಬಗಳಿಗೆ ಸರ್ಕಾರ ನಿವೇಶನ ಮಂಜೂರು ಮಾಡುವ ಮೂಲಕ, ಅಲ್ಲಿನ ವಸತಿರಹಿತ ಕುಟುಂಬಗಳಿಗೆ ತಲೆಮೇಲೊಂದು ಸೂರು ಕಟ್ಟಿಕೊಂಡು, ನೆಮ್ಮದಿಯ ಜೀವನ ಸಾಗಿಸಲು ಅವಕಾಶ ಕಲ್ಪಿಸಿತ್ತು. ಹೀಗಾಗಿ, ಸರ್ಕಾರವೇ ನಿವೇಶನದಲ್ಲಿ ವಾಸಿಸಲು ಅನುಮತಿ ನೀಡಿದ ಮೇಲೆ ಅಲ್ಲಿನ ಬಹುತೇಕ ವಸತಿರಹಿತ ಬಡ ಕುಟುಂಬಗಳು, ಅಲ್ಲಿ ನೆಲೆಯೂರವ ಮೂಲಕ, ಬದುಕು ಕಟ್ಟಿಕೊಂಡಿದ್ದಾರೆ. ಜತೆಗೆ, ಇಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಆಶ್ರಯ ಯೋಜನೆ ಅಡಿ ತಾಲ್ಲೂಕು ಆಡಳಿತ ಹಕ್ಕುಪತ್ರಗಳನ್ನು ಸಹ ವಿತರಣೆ ಮಾಡಿದೆ. ಆದರೆ, ಗ್ರಾಮದ ವ್ಯಕ್ತಿಯೊಬ್ಬರು ಸರ್ಕಾರ ನನ್ನ ಜನೀನನ್ನು ಅತಿಕ್ರಮಿಸುವ ಮೂಲಕ ಇಲ್ಲಿ ಮನೆಗಳನ್ನು ನಿರ್ಮಿಸಿದೆ. ಹೀಗಾಗಿ, ಮನೆಗಳನ್ನು ತೆರವುಗೊಳಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಜತೆಗೆ, ತೆರವುಗೊಳಿಸದಿದ್ದರೇ, ಜೆಸಿಬಿ ಯಂತ್ರದ ಮೂಲಕ ನಾನೇ ನೆಲಸಮ ಮಾಡುವ ಮೂಲಕ ನನ್ನ ಜಮೀನನ್ನು ಸ್ವಾಧೀನ ಪಡೆಯುತ್ತೇನೆ ಎಂದು ನಿತ್ಯವೂ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ, ಅವರ ಕಿರುಕುಳವನ್ನು ತಪ್ಪಿಸುವ ಮೂಲಕ, ನಾವು ಕಟ್ಟಿಕೊಂಡ, ಆಶ್ರಯ ಮನೆಗಳಲ್ಲಿ ಜೀವಿಸಲು ಅವಕಾಶ ಕಲ್ಪಿಸಿಕೊಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಜಮೀನು ನನಗೆ ಸೇರಿದೆ. ಆದರೆ, ಸರ್ಕಾರವೇ ಅತಿಕ್ರಮಿಸಿದೆ. ಹೀಗಾಗಿ, ಕೆಡುವುತ್ತೇವೆ, ನೆಲಸಮ ಮಾಡುತ್ತೇನೆ ಎಂದು ಅಮಾಯಕ ಜನರನ್ನು ಹೆದರಿಸುವ, ಬೆದರಿಸುವ ಮೂಲಕ ಇಲ್ಲಸಲ್ಲದ ಕೆಲ ದಾಖಲೆಗಳನ್ನು ಅಮಾಯಕರ ಮುಂದೆ ಪ್ರದರ್ಶಿಸುವ ಮೂಲಕ ನಮ್ಮಲಿನ ಕೆಲವರಿಂದ ಹಣ ವಸೂಲಿ ಮಾಡಿದ್ದಾನೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಒಂದು ವೇಳೆ ಜಮೀನನ್ನು ಸರ್ಕಾರವೇ ಅತಿಕ್ರಮಣ ಮಾಡಿಕೊಂಡಿದ್ದರೇ, ಕಳೆದ ಎರಡು ದಶಕದಿಂದಲೂ ಸುಮ್ಮನಿರುವ ಈ ವ್ಯಕ್ತಿ ಈಗ ಏಕಾಏಕಿ ನನ್ನ ಜಮೀನು ಎಂದು ಅಮಾಯಕರನ್ನು ಹೆದರಿಸಲು ಮುಂದಾಗಿದ್ದಾನೆ. ಒಂದು ವೇಳೆ, ಜಮೀನು ತನಗೆ ಸಂಬAಧಿಸಿದ್ದೇ ಆದರೆ, ನಮಗೆ ನಿವೇಶನ ಹಾಗೂ ಮನೆ ಮಂಜೂರು ಮಾಡಿರುವ ತಾಲ್ಲೂಕು ಆಡಳಿತದ ವಿರುದ್ಧ ಕಾನೂನು ಕ್ರಮಜರುಗಿಸುವ ಮೂಲಕ ತನಗೆ ಸಲ್ಲಬೇಕಾದ ಪರಿಹಾರ ಪಡೆಯಬೇಕೆ ಹೊರತು, ಈಗಾಗಲೇ ಎರಡು ದಶಕಗಳಿಂದಲೂ ಅಲ್ಲಿ ನೆಲೆಯೂರಿರುವ ಬಡ ಕುಟುಂಬಗಳನ್ನು ವಕ್ಕಲೆಬ್ಬಿಸಲು ಮುಂದಾಗಿರುವುದು ಆತನ ದೌರ್ಜನ್ಯವೇ ಸರಿ. ಹೀಗಾಗಿ, ಕೂಡಲೇ ಸಂಬAಧಿಸಿದ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಮಧ್ಯ ಪ್ರವೇಶಿಸುವ ಮೂಲಕ, ಆತನ ಕಿರುಕುಳದಿಂದ ನಮ್ಮನ್ನು ರಕ್ಷಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ ಮನವಿಪತ್ರವನ್ನು ತಹಶೀಲ್ದಾರ್ ಗಿರೀಶ್ಬಾಬು ಅವರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ ಪಕ್ಷದ ಜಿಲ್ಲಾ ಘಟಕದ ಕಾರ್ಯದರ್ಶಿ ಎಚ್.ಎಂ. ಸಂತೋಷ್, ತಾಲ್ಲೂಕು ಘಟಕದ ಕಾರ್ಯದರ್ಶಿ ಎಚ್. ರಮೇಶನಾಯ್ಕ್, ತಾಲ್ಲೂಕು ಘಟಕದ ಸಹಕಾರ್ಯದರ್ಶಿ ಬಳಿಗಾನೂರು ಕೊಟ್ರೇಶ್, ಅಲ್ಲಿನ ನಿವಾಸಿಗಳಾದ ಮಂಜಮ್ಮ, ಜಹೀದಾಬಿ, ರತ್ನಮ್ಮ., ನಾಗಮ್ಮ, ರೇಣುಕಮ್ಮ, ಕೆಂಚಮ್ಮ, ಮಂಜಮ್ಮ, ಕೆಂಚಪ್ಪ, ಪರಸಪ್ಪ, ಡಿ. ಮಂಜುನಾಥ, ಡಿ. ಶಿವಪ್ಪ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

