ವಿಜಯಸಿರಿನ್ಯೂಸ್.ಕಾಂ/ ದಾವಣಗೆರೆ
ರಾಜ್ಯದ ಸಚಿವ ಸಂಪುಟದಲ್ಲಿ ರಾಜ್ಯದ ಬಹುಸಂಖ್ಯಾತ ವಾಲ್ಮೀಕಿ ನಾಯಕ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯದೇ ಸಾಮಾಜಿಕನ್ಯಾಯದಿಂದ ಅವಕಾಶ ವಂಚಿತವಾಗಿದೆ. ಹೀಗಾಗಿ, ಕೂಡಲೇ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಹಾಗೂ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ನಾಗೇಂದ್ರ ಅವರನ್ನು ಪುನಃ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಅವಕಾಶ ವಂಚಿತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವಂತೆ ಒತ್ತಾಯಿಸಿ, ದಾವಣಗೆರೆ ಜಿಲ್ಲಾ ವಾಲ್ಮೀಕಿನಾಯಕ ಸಮಾಜದ ನಿಯೋಗ, ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಿದೆ.
ನಿಯೋಗದ ನೇತೃತ್ವವಹಿಸಿದ್ದ ವಾಲ್ಮೀಕಿನಾಯಕ ಸಮಾಜದ ಜಿಲ್ಲಾಘಟಕದ ಅಧ್ಯಕ್ಷ ಬಿ. ವೀರಣ್ಣ ಅವರು ಈ ಸಂದರ್ಭದಲ್ಲಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದಾದ್ಯಂತ ಎಲ್ಲಾ ಕ್ಷೇತ್ರಗಳ್ಲಿಯೂ ವಾಲ್ಮೀಕಿ ನಾಯಕ ಸಮುದಾಯ ಈ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ನೆರವಾಯಿತು. ಜತೆಗೆ, ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ 15ಕ್ಷೇತ್ರಗಳ ಪೈಕಿ, 14ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಶಾಸಕರೇ ಆಯ್ಕೆಯಾಗಿದ್ದಾರೆ. ಜತೆಗೆ, ಒಂದು ಪರಿಶಿಷ್ಟ ಪಂಗಡದ ಲೋಕಸಭಾ ಕ್ಷೇತ್ರ ಹಾಗೂ ಇನ್ನೊಂದು ಸಾಮಾನ್ಯ ಕ್ಷೇತ್ರದಲ್ಲಿಯೂ ನಮ್ಮ ಸಮುದಾಯದ ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗುವ ಮೂಲಕ ವಾಲ್ಮೀಕಿ ನಾಯಕ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ ಎಂಬ ಸ್ಪಷ್ಟ ಸಂದೇಶವನ್ನು ಕೊಟ್ಟಿದ್ದಾರೆ. ಜತೆಗೆ, ಇಬ್ಬರು ವಿಧಾನ ಪರಿಷತ್ ಸದಸ್ಯರು ನಮ್ಮ ಸಮುದಾಯದವರೇ ಆಯ್ಕೆಯಾಗಿದ್ದಾರೆ. ಶೇ.100ಕ್ಕೆ ನೂರರಷ್ಟು ಕಾಂಗ್ರೆಸ್ ಪಕ್ಷದ ಜತೆಗಿದ್ದರೂ, ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸದೇ, ಬೆಂಬಲಿಸದ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆರಂಭದಲ್ಲಿ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಲಾಯಿತು. ಬಳಿಕ, ಈಗ ಕೆ.ಎನ್. ರಾಜಣ್ಣ ಅವರನ್ನು ಕ್ಷುಲ್ಲಕ ಕಾರಣ ಮುಂದಿಟ್ಟುಕೊಂಡು, ಸಂಪುಟದಿಂದ ಕೈಬಿಡಲಾಗಿದೆ. ವಾಲ್ಮೀಕಿನಾಯಕ ಸಮುದಾಯದ ಪ್ರಭಾವಿ ನಾಯಕ ಪೈಕಿ, ಇಬ್ಬರೂ ಪ್ರಭಾವಿ ಹಾಗೂ ಜನಾನುರಾಗಿ ನಾಯಕರಾಗಿದ್ದಾರೆ. ಇಂಥಹವನ್ನು ಯಾವುದೋ ನೆಪವೊಡ್ಡಿ ಸಂಪುಟದಿಂದ ಕೈಬಿಟ್ಟಿರುವ ಕ್ರಮ ನಿಜಕ್ಕೂ ವಿಷಾದನೀಯ. ಕೂಡಲೇ ಇಬ್ಬರಿಗೂ ಪುನಃ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸುವ ಮೂಲಕ ವಾಲ್ಮೀಕಿ ನಾಯಕ ಸಮುದಾಯಕ್ಕೆ ಆಗಿರುವ ಸಾಮಾಜಿಕನ್ಯಾಯದ ಕೊರತೆಯನ್ನು ನೀಗಿಸಲು ಮುಂದಾಗಬೇಕು. ಇಲ್ಲವಾದಲ್ಲಿ, ತೀವ್ರಸ್ವರೂಪದ ಹೋರಾಟಕ್ಕೆ ಸರ್ಕಾರವೇ ಅಣಿ ಮಾಡಿಕೊಟ್ಟಂತಾಗುತ್ತದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ವೀರಣ್ಣ ಅವರು ಗುಡುಗಿದರು.

ನಿಯೋಗದಲ್ಲಿದ್ದ ಸಮಾಜದ ಜಿಲ್ಲಾಘಟಕದ ಉಪಾಧ್ಯಕ್ಷರೂ ಆದ ಹಿರಿಯ ವಕೀಲ ಎನ್.ಎಂ. ಆಂಜನೇಯ ಗುರೂಜಿ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಬಿಜೆಪಿ ಪಕ್ಷ ನಮ್ಮ ಸಮುದಾಯದ ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಎಂದೇ ಬಿಂಬಿಸಿತು. ಆದರೆ, ಬಿಜೆಪಿ ಅವಧಿಯ ಪೂಣಾವಧಿಯವರೆಗೂ, ಶ್ರೀರಾಮುಲು ಅವರು ಉಪಮುಖ್ಯಮಂತ್ರಿಯಾಗಲು ಅವಕಾಶ ಕಲ್ಪಿಸಲಿಲ್ಲ. ಜತೆಗೆ, ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ರಮೇಶ್ ಜಾರಕಿಹೊಳೆ ಅವರಿಗೆ ತೊಂದರೆ ಸೃಷ್ಟಿಸುವ ಮೂಲಕ ಸಂಪುಟದಿಂದ ಕೈಬಿಡಲಾಯಿತು. ಹೀಗಾಗಿ, ವಾಲ್ಮೀಕಿ ನಾಯಕ ಸಮುದಾಯ ಈ ಬಾರೀ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಪರ್ಯಾಯ ಸರ್ಕಾರಕ್ಕೆ ಮುಂದಾಗಿಯಿತು. ಇಲ್ಲಿಯೂ ಅದೇ ಸಂಪ್ರದಾಯ ಮುಂದುವರೆದಿದೆ. ಈ ಸಂಪ್ರದಾಯಕ್ಕೆ ಅಂತ್ಯಹಾಡುವ ಮೂಲಕ ಕೈಬಿಟ್ಟಿರುವ ಇಬ್ಬರೂ ನಾಯಕರನ್ನು ಪುನಃ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ನಂಬಿಕೆಯಿಂದ ಬೆಂಬಲಿಸಿದ ಸಮುದಾಯಕ್ಕೆ ನಂಬಿಕೆ ದ್ರೋಹ ಹಾಗೂ ವಂಚನೆ ಮಾಡಿದಂತಾಗುತ್ತದೆ ಎಂದು ಎಚ್ಚರಿಸಿದರು.
ಉಭಯ ನಾಯಕರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿದ ಮನವಿಯನ್ನು ನಿಯೋಗ ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಸಲ್ಲಿಸಿತು.
ನಿಯೋಗದಲ್ಲಿ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಘಟಕದ ಕಾರ್ಯದರ್ಶಿ ಶ್ಯಾಗಲೆ ಕೆ.ಆರ್. ಮಂಜುನಾಥ್, ವಕೀಲ ಕೆ.ಕೆ. ರಂಗಸ್ವಾಮಿ, ಮುಖಂಡರಾದ ಮುದೇಗೌಡರ ಗಿರೀಶ್, ಗುಮ್ಮನೂರು ಶಂಭಣ್ಣ, ಎಸ್.ಕೆ. ಸ್ವಾಮಿ, ದೇವರಬೆಳಕೆರೆ ಪೈಲ್ವಾನ್ ಮಹೇಶ್ವರಪ್ಪ, ಎಂ.ಬಿ.ಕೇರಿ ನರಸಿಂಹರಾಜು, ಸಿರಿಗೆರೆ ರಂಗಪ್ಪ, ಕಂಪ್ಲೇಶ, ಬಾಳಪ್ಪ, ಸುರೇಶಬಾಬು, ಕೊಡಗನೂರು ಸತೀಶ್ ಸೇರಿದಂತೆ ವಿವಿಧ ಮುಖಂಡರು ಹಾಜರಿದ್ದರು.

